ಕೊಟ್ಟೂರು: ಇಲ್ಲಿನ ಪಟ್ಟಣ ಪಂಚಾಯ್ತಿ ಆವರಣದಲ್ಲಿರುವ ಬಾಲಭವನ ಕಟ್ಟಡದ ನವೀಕರಣ ಕಾರ್ಯ ಪೂರ್ಣಗೊಳ್ಳುತ್ತಿದ್ದಂತೆ ನ್ಯಾಯಾಲಯದ ಆರಂಭಕ್ಕೆ ಅನುಮತಿ ನೀಡಲಾಗುವುದು ಎಂದು ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ವಿಜಯನಗರ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಪ್ರದೀಪ್ ಸಿಂಗ್ ಯೆರೂರ್ ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ. ರಾಜಶೇಖರ್ , ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರಸ್ವಾಮಿ ಹಾಗೂ ಕೂಡ್ಲಿಗಿ ಹಿರಿಯ ಸಿವಿಲ್ ನ್ಯಾಯಾಧೀಶ ಜೆ.ಯೋಗೀಶ್ , ಕಿರಿಯ ಶ್ರೇಣಿ ನ್ಯಾಯಾಧೀಶರಾದ ಎಚ್.ಜೆ. ಶಿಲ್ಪ ಇವರೊಂದಿಗೆ ಭಾನುವಾರ ಪಟ್ಟಣಕ್ಕೆ ಆಗಮಿಸಿ ತಾತ್ಕಾಲಿಕ ಕಟ್ಟಡದ ನವೀಕರಣ ಕಾರ್ಯ ವೀಕ್ಷಿಸಿ ನಂತರ ಅವರು ಮಾತನಾಡಿ ಶೀಘ್ರದಲ್ಲಿಯೇ ನವೀಕರಣ ಕಾರ್ಯ ಪೂರ್ಣಗೊಳಿಸಿಕೊಟ್ಟರೆ ಪುನಃ ಜಿಲ್ಲಾ ನ್ಯಾಯಾಧೀಶರು ಕಟ್ಟಡವನ್ನು ಪರಿಶೀಲಿಸಿ ವರದಿ ಸಲ್ಲಿಸಿದ ನಂತರ ನ್ಯಾಯಾಲಯ ಆರಂಭಕ್ಕೆ ಅನುಮತಿ ನೀಡಲಾಗುವುದು ಎಂದರು.
ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಪಟ್ಟಣದ ಹೊರವಲಯದಲ್ಲಿ ಕನಿಷ್ಠ ಐದಾರು ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾಡಳಿತದಿಂದ ಪಡೆದುಕೊಂಡರೆ ಸುಸಜ್ಜಿತ ನ್ಯಾಯಾಲಯದ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುತ್ತದೆ ಹಾಗಾಗಿ ಈ ನಿಟ್ಟಿನತ್ತ ವಕೀಲರು ಕಾರ್ಯೋನ್ಮುಖರಾಗುವಂತೆ ಸಲಹೆ ನೀಡಿದರು.
ಹೋರಾಟ ಸಮಿತಿ ಅಧ್ಯಕ್ಷ ಎಂ.ಗುರುಸಿದ್ಧನಗೌಡ ಮಾತನಾಡಿ ಕೊಟ್ಟೂರು ತಾಲ್ಲೂಕಿನ ಅತಿ ಹೆಚ್ಚು ಪ್ರಕರಣಗಳು ಕೂಡ್ಲಿಗಿ ನ್ಯಾಯಾಲಯದಲ್ಲಿ ದಾಖಲಾಗಿರುತ್ತವೆ ಹಾಗಾಗಿ ಕಕ್ಷಿದಾರರಿಗೆ ವಿಳಂಭವಾಗದಂತೆ ನ್ಯಾಯ ದೊರಕಿಸಿಕೊಡಲು ನ್ಯಾಯಾಲಯ ಸ್ಥಾಪನೆಯಿಂದ ಸಹಕಾರಿಯಾಗುತ್ತದೆ ಹಾಗೂ ಈ ಭಾಗದ ವಕೀಲರಿಗೂ ಸಹ ಅನುಕೂಲವಾಗುತ್ತದೆ ಎಂದು ನ್ಯಾಯಾಧೀಶರಲ್ಲಿ ಮನವರಿಕೆ ಮಾಡಿಕೊಟ್ಟರು.
ನ್ಯಾಯಾಲಯ ಹೋರಾಟ ಸಮಿತಿ ಉಪಾಧ್ಯಕ್ಷ ಪಿ.ಪ್ರಭುದೇವ್, ಕಾರ್ಯದರ್ಶಿ ಶಿವಾನಂದ ಬಾವಿಕಟ್ಟಿ, ಜಂಟಿ ಕಾರ್ಯದರ್ಶಿಗಳಾದ ಕೆ.ಗುರುಬಸವರಾಜ್, ಕಾಳಚಾರಿ ಬಿ , ಖಜಾಂಚಿ ಟಿ.ಎಂ.ಸೋಮಯ್ಯ ಹಾಗೂ ಸದಸ್ಯರು, ಕೂಡ್ಲಿಗಿ ವಕೀಲರ ಸಂಘದ ಅಧ್ಯಕ್ಷ ಹೊನ್ನೂರಪ್ಪ ಹಾಗೂ ಪದಾಧಿಕಾರಿಗಳು, ವಕೀಲರು ಪಾಲ್ಗೊಂಡಿದ್ದರು.
