Advertisement
LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಂಧತೆಯನ್ನು ಮೆಟ್ಟಿ ನಿಂತ.... ಶೋಭಾ ಮಲ್ಲಾಡದ್

ಇರುವುದೆಲ್ಲವನ್ನು ಅನುಭವಿಸದೆ, ಇರದೆ ಇರುವುದರ ಕುರಿತು ಹಲುಬುವ, ತಾನು ಬಯಸಿದ್ದು ತನಗೆ ಬೇಕೆ ಬೇಕೆಂದು ಹಪಹಪಿಸುವ ಜನರ ನಡುವೆ ಸಕಲಾಂಗಗಳಿದ್ದೂ ವಿಕಲಾಂಗರಂತೆ ಬದುಕುವ ನೂರಾರು, ಸಾವಿರಾರು ಜನರ ನಡುವೆ, ತನ್ನವರು ಎಂಬ ಯಾರೂ ಇಲ್ಲದೆ ಇದ್ದರೂ ದೈಹಿಕವಾಗಿ ಗಟ್ಟಿಮುಟ್ಟಾಗಿದ್ದರೂ ಕಣ್ಣು ಕಾಣದ ಅಂಧಳಾಗಿ ತನ್ನ ವೈಯುಕ್ತಿಕ ಕೆಲಸಗಳನ್ನು ತಾನೇ ನಿರ್ವಹಿಸುತ್ತಾ ಬದುಕನ್ನು ಸಾಗಿಸುತ್ತಿರುವ ಮಹಿಳೆಯೇ ನಮ್ಮ ಇಂದಿನ
ಕಥಾ ನಾಯಕಿ ಶೋಭಾ ಮಲ್ಲಾಡದ್.

ಹುಟ್ಟಿದ ಹತ್ತು ವರ್ಷಗಳವರೆಗೆ ಸಾಮಾನ್ಯ ಬಾಲಕಿಯರಂತೆ ಬೆಳೆದ ಆಕೆಗೆ ಹತ್ತನೇ ವಯಸ್ಸಿನ ಸುಮಾರಿಗೆ ಆಕೆಯ ಪಾಲಕರ ಸಂಬಂಧಿಗಳ ದ್ವೇಷಕ್ಕೆ ಬಲಿಯಾಗಿ ಕಣ್ಣುಗಳನ್ನು ಕಳೆದುಕೊಂಡಳು. ಕೊಬ್ಬರಿ ಎಣ್ಣೆಯಲ್ಲಿ ಯಾವುದೋ ಎಲೆಯ ರಸವನ್ನು ಹಾಕಿ ತಲೆಯ ಕೂದಲಿಗೆ ಹಚ್ಚಿದ ಪರಿಣಾಮವಾಗಿ ಆ ರಸ ಕಣ್ಣೊಳಗೆ ಹೋಗಿ ಆಕೆಯ ಕಣ್ಣುಗಳ ದೃಷ್ಟಿ ಇಂಗಿ ಹೋಯಿತು ಎಂದು ಆಕೆ ಹೇಳುತ್ತಾಳೆ.

ಇಷ್ಟರಲ್ಲೇ ಆಕೆಯ ಮದುವೆಯನ್ನು ಪಕ್ಕದ ಪಟ್ಟಣದ ಯುವಕನೊಂದಿಗೆ ಮಾಡಲಾಗಿತ್ತು. 12ನೇ ವರ್ಷಕ್ಕೆ ಋತುಮತಿಯಾದ ಆಕೆಯನ್ನು ಮುಂದಿನ ಶುಭ ದಿನದಲ್ಲಿ ಗಂಡನ ಮನೆಗೆ ಕಳುಹಿಸಿಕೊಡಲಾಯಿತು.
ಈಗಾಗಲೇ ಎರಡು ಕಣ್ಣುಗಳನ್ನು ಕಳೆದುಕೊಂಡು ತನ್ನ ಪಾಡಿಗೆ ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಆಕೆ ನಿರ್ವಹಿಸಿಕೊಂಡು ಹೋಗುತ್ತಿದ್ದಳಾದರೂ ಆಕೆಯನ್ನು ಸೊಸೆ ಎಂದು ಒಪ್ಪಿಕೊಳ್ಳಲು ಆಕೆಯ ಅತ್ತೆ ಮಾವರಾಗಲಿ, ಹೆಂಡತಿ ಎಂದು ಒಪ್ಪಿಕೊಳ್ಳಲು ಗಂಡನಾಗಲಿ ತಯಾರಾಗಲಿಲ್ಲ. ಮುಂದೆ ಒಂದೆರಡು ವಾರಗಳಲ್ಲಿ ಆಕೆಯನ್ನು ತವರಿಗೆ ವಾಪಸ್ಸು ಕಳುಹಿಸಿಬಿಟ್ಟರು ಆಕೆಯ ಅತ್ತೆ ಮಾವ.

ತಮ್ಮ ಒಬ್ಬಳೇ ಮಗಳ ಬಾಳು ಹೀಗೆ ಹಾಳಾದುದನ್ನು ಕಂಡು ವ್ಯಸನಕ್ಕೆ ಈಡಾದ ತಂದೆ ತಾಯಿಗಳು ಕೊರಗಿ ಮುಂದಿನ ಕೆಲವೇ ವರ್ಷಗಳಲ್ಲಿ ಮರಣ ಹೊಂದಿದರು. ನಂತರ ಹಲವಾರು ವರ್ಷಗಳ ಕಾಲ ಆಕೆಯನ್ನು ತನ್ನ ಮನೆಯಲ್ಲಿಯೇ ಇಟ್ಟುಕೊಂಡು ಜೋಪಾನ ಮಾಡಿದ್ದು ಆಕೆಯ ದೊಡ್ಡಮ್ಮ. ಕೆಲವು ವರ್ಷಗಳ ಹಿಂದೆ ಆಕೆಯ ದೊಡ್ಡಮ್ಮನೂ ತೀರಿ ಹೋದಾಗ ಅಕ್ಷರಶಃ ಒಂಟಿಯಾದಳಾಕೆ.

ಅನಿವಾರ್ಯವಾಗಿ ಆಕೆಯ ಸೋದರ ಮಾವ ಮತ್ತು ಆತನ ಪತ್ನಿ ಆಕೆಯನ್ನು ಜೋಪಾನ ಮಾಡಿದರಾದರೂ ಎಲ್ಲಿಯವರೆಗೆ ಹೀಗೆ ಆಕೆಯನ್ನು ನೋಡಿಕೊಳ್ಳುವುದು ಎಂದು ಬೇಸತ್ತ ಸೋದರಮಾವನ ಪತ್ನಿ ತನ್ನ ಪತಿಯನ್ನು ಕರೆದುಕೊಂಡು ತನ್ನ ತವರೂರಿಗೆ ವಲಸೆ ಹೋದಳು.... ಇದೀಗ ಮೊತ್ತ ಮೊದಲ ಬಾರಿಗೆ ನೀರಿನಿಂದ ಹೊರ ಬಿದ್ದ ಮೀನಿನಂತಾದಳು ಆಕೆ.
ಆದರೆ ಬದುಕಿನ ಬಂಡಿ ಸಾಗಲೇಬೇಕಲ್ಲ!

ಸೋದರಮಾವ ಬಿಟ್ಟು ಹೋದ ಪುಟ್ಟ ಮನೆಯಲ್ಲಿ ತಾನೊಬ್ಬಳೆ ಇದ್ದು ಇಡೀ ಮನೆಯ ಕಸ ಗುಡಿಸುವ, ಸುಣ್ಣ ಸಾರಿಸುವ, ಪಾತ್ರೆ ತಿಕ್ಕುವ, ಬಟ್ಟೆ ಒಗೆಯುವ
ಅಡುಗೆ ಮಾಡಿಕೊಳ್ಳುವ ಆಕೆ ರೊಟ್ಟಿ ತಟ್ಟುವುದನ್ನು ಕೂಡ ಕಲಿತಿದ್ದಳು. ತನ್ನ ಮನೆ ಮತ್ತು ಹಿತ್ತಲುಗಳಿಗೆ ಸರಾಗವಾಗಿ ಒಬ್ಬಳೇ ಓಡಾಡುತ್ತಿದ್ದ ಆಕೆಗೆ ಹೊಲಕ್ಕೆ ಹೋಗಲು ಮಾತ್ರ ಯಾರಾದರೂ ಜೊತೆ ಬೇಕಾಗುತ್ತಿತ್ತು.

ಒಂದೊಮ್ಮೆ ಹೊಲಕ್ಕೆ ಕರೆದೊಯ್ದು ಆಕೆಯನ್ನು ಬಿಟ್ಟರೆ ಉಳಿದೆಲ್ಲ ಕೂಲಿ ಹೆಣ್ಣುಮಕ್ಕಳಂತೆ ಆಕೆಯೂ ಕೂಡ ಬೀಜ ಬಿತ್ತುವ, ಗದ್ದೆಯಲ್ಲಿ ಸಸಿ ನೆಡುವ, ಕಳೆ ಕೀಳುವ, ರಾಶಿ ಮಾಡುವ ಎಲ್ಲ ರೈತಾಪಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೆಲಸ ನಿರ್ವಹಿಸುವ ಶೋಭಾ ಆರ್ಥಿಕವಾಗಿ ಪರಾವಲಂಬಿಯಾಗಿಲ್ಲ.

ಕೂಲಿ ಮಾಡಿ ತನ್ನ ಬದುಕಿನ ಬಂಡಿಯನ್ನು ಎಳೆಯುತ್ತಿರುವ ಶೋಭಾಗೆ ಆಕೆಯ ಊರಿನ ಸಮಸ್ತ ಜನರ ಸಹಾಯ ಸಹಕಾರಗಳು ದೊರೆಯುತ್ತಿದೆ ಎಂಬುದು ಸಮಾಧಾನದ ವಿಷಯ.

ಪ್ರಸ್ತುತ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೆಸರೂರು ಗ್ರಾಮದಲ್ಲಿ ವಾಸವಾಗಿರುವ ಶೋಭಾ ಮಲ್ಲಾಡದ ಬದುಕು ಅನುಕರಣೀಯವಾದುದು.

ಇನ್ನು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ನೂರಾರು ಹೆಣ್ಣು ಮಕ್ಕಳು ದೈಹಿಕ ಅಂಗಗಳ ನ್ಯೂನತೆಯನ್ನು ಹೊಂದಿದ್ದರೂ ಕೂಡ ಮಾನಸಿಕವಾಗಿ ಬಲಿಷ್ಠರು ಎಂಬುದಕ್ಕೆ ಸಾಕ್ಷಿಯಾಗಿ ಶೋಭಾ ಮಲ್ಲಾಡದ ನಮ್ಮ ಮುಂದೆ ಇದ್ದಾರೆ.

ಇತ್ತೀಚೆಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ ಮುಂಡರಗಿ ತಾಲೂಕ ಕದಳಿ ಮಹಿಳಾ ವೇದಿಕೆ ಮತ್ತು ವೀರಭದ್ರೇಶ್ವರ ಮಹಿಳಾ ಘಟಕಗಳು ಶೋಭಾ ಮಲ್ಲಾಡದವರನ್ನು
ಕರೆಸಿ ಸನ್ಮಾನಿಸಿದ್ದು ಆಕೆಗೆ ಸಂತಸವನ್ನು ಉಂಟುಮಾಡಿದೆ.

ಆಕೆಯನ್ನು ಮಾತನಾಡಿಸಿದಾಗ ತನ್ನೆಲ್ಲ ಕಥೆಯನ್ನು ಹೇಳಿಕೊಂಡ ಆಕೆ ತನ್ನವರೆನ್ನುವ ಯಾರೂ ಇಲ್ಲ ಎಂಬ ನೋವನ್ನು ತೋಡಿಕೊಂಡಳಾದರೂ ತನ್ನೂರಿನ ಜನರ ಪ್ರೀತಿ ಸಹಕಾರಗಳನ್ನು ಧನ್ಯತೆಯಿಂದ ನೆನೆದಳು..
ಆಕೆಯ ಜೀವನ ಪ್ರೀತಿ ಆಸದಳ.

ಕೈಕಾಲು ಗಟ್ಟಿ ಇರುವವರೆಗೂ ನಾನು ಬದುಕಬಲ್ಲೆ ಆದರೆ ಪರಾಧೀನಳಾಗುವ ಹೊತ್ತಿಗೆ ದೇವರು ನನ್ನನ್ನು ಕರೆದುಕೊಳ್ಳಲಿ ಎಂದು ಆಶಿಸುವ ಆಕೆ ಸಣ್ಣಪುಟ್ಟದಕ್ಕೂ ದೇವರನ್ನು,ಸಮಾಜವನ್ನು, ಹೆತ್ತವರನ್ನು ಮತ್ತು ವ್ಯವಸ್ಥೆಯನ್ನು ದೂಷಿಸುವ ಇಂದಿನ ಸಾಮಾಜಿಕ ಮನಸ್ಥಿತಿಯ ಜನರ ನಡುವೆ ಅಂಧೆಯಾಗಿಯೂ ಬದುಕನ್ನು ಅದು ಇರುವ ರೀತಿಯಲ್ಲಿಯೇ ಸ್ವೀಕರಿಸಿ ಇಂದಿನ ಯುವ ಜನಾಂಗಕ್ಕೆ ಮಾರ್ಗದರ್ಶಿಯಾಗಿದ್ದಾಳೆ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್

Author
Publisher and Editor: Ramesh Uppar
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ: ಶೇ. 81.83 ರಷ್ಟು ಡಿಜಿಟಲೀಕರಣ ಪೂರ್ಣಜಿಲ್ಲಾ ಸಂಯೋಜಕರ ಹುದ್ದೆಗೆ ನೇಮಕಾತಿಗೆ ಅರ್ಜಿ ಆಹ್ವಾನಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಬಿಚ್ಚಾಲಿ ಗ್ರಾಮದಲ್ಲಿ ಆಗಸ್ಟ್ 18ರವರೆಗೆ ನಿಷೇಧಾಜ್ಞೆ ಜಾರಿ: ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ್ಉದ್ಯಮಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ: ಜಿ.ಯು.ಹುಡೇದ್ಬಳ್ಳಾರಿ: ಜಿಲ್ಲಾಡಳಿತದಿಂದ ಮುಂದುವರೆದ ಅತಿಕ್ರಮಣ ತೆರವು ಕಾರ್ಯಾಚರಣೆ - ಸರ್ಕಾರಿ ಜಮೀನು ವಶಕ್ಕೆಮೀನು ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್: ಅರ್ಜಿ ಆಹ್ವಾನತುಂಗಭದ್ರಾ ಕಾಲುವೆಗಳಿಗೆ ನೀರು ಬಿಡುಗಡೆ ವೇಳಾಪಟ್ಟಿ ----ಸಚಿವರಾದ ಶಿವರಾಜ ತಂಗಡಗಿ ಅವರ ಅಧ್ಯಕ್ಷತೆಯಲ್ಲಿ ಮುಂಗಾರು ಹಂಗಾಮಿನ 126ನೇ ನೀರಾವರಿ ಸಲಹಾ ಸಮಿತಿ ಸಭೆ -- ತುಂಗಭದ್ರಾ ಕಾಲುವೆಗಳಿಗೆ 90 ದಿನಗಳವರೆಗೆ ಮಾತ್ರ ನೀರು ಹರಿಸಲು ನಿರ್ಣಯಕುವೆಂಪು ವಿವಿ: ಆಗಸ್ಟ್ 13 ಮತ್ತು 14ರಂದು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶಾತಿ