ಸಿರುಗುಪ್ಪ: ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಚೆಗೆ ನಡೆದ ದೇವಸ್ಥಾನದ ಚಿನ್ನಾಭರಣ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ತಾಲೂಕಿನ ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೈಲಾಪುರ ಗ್ರಾಮದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ಹಾಗೂ ಸಿರಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕರೂರು ಗ್ರಾಮದ ಶ್ರೀ ಸುಂಕಲಮ್ಮ ದೇವಸ್ಥಾನದಲ್ಲಿ ದೇವರ ವಿಗ್ರಹಗಳ ಮೇಲಿನ ಚಿನ್ನಾಭರಣಗಳ ಕಳ್ಳತನ ನಡೆದಿತ್ತು.
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿತರಾದ ಚಾನಾಳ್ ಗ್ರಾಮದ ನಿವಾಸಿಗಳಾದ ಮಹಾಲಿಂಗ (48) ಹಾಗೂ ವೆಂಕಟೇಶ್ ಉರುಫ್ ಹಡ್ಲಿಗಿ ವೆಂಕಟೇಶ್ (47), ಇವರನ್ನು ಬಂಧಿಸಿ ಆರೋಪಿತರಿಂದ ರೂ.1.25 ಲಕ್ಷ ಬೆಲೆ ಬಾಳುವ ಬಂಗಾರ ಮತ್ತು ಬೆಳ್ಳಿ ಆಭರಣ ಪ್ರಕರಣದಲ್ಲಿ ಕೃತ್ಯಕ್ಕೆ ಬಳಸಿದ ರೂ.50 ಸಾವಿರ ಬೆಲೆ ಬಾಳುವ ದ್ವಿಚಕ್ರ ವಾಹನ ಜಪ್ತು ಮಾಡಿಕೊಂಡಿರುತ್ತಾರೆ.
ಮೈಲಾಪುರ ಗ್ರಾಮದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಕಳುವಾದ ರೂ.98 ಸಾವಿರ ಮೌಲ್ಯದ ಬೆಳ್ಳಿ ಮತ್ತು ಬಂಗಾರದ ಆಭರಣಗಳನ್ನು ಆರೋಪಿತರಿಂದ ಪಡೆದಿದ್ದು, ನಗದು ಸೇರಿದಂತೆ ಒಟ್ಟು ರೂ. 2.83 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ಈ ಪ್ರಕರಣವನ್ನು ಬಳ್ಳಾರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನವೀನ್ ಕುಮಾರ್, ಬಳ್ಳಾರಿ ಹಾಗೂ ಸಿರುಗುಪ್ಪ ಪೊಲೀಸ್ ಉಪಾಧೀಕ್ಷಕ ಮಾಲತೇಶ ಕೂನಬೇವ್ ಮಾರ್ಗದರ್ಶನದಲ್ಲಿ ತೆಕ್ಕಲಕೋಟೆ ವೃತ್ತ ನಿರೀಕ್ಷಕ ಚಂದನ್ ಗೋಪಾಲ್.ವಿ, ಸಿರಿಗೇರಿ ಠಾಣೆಯ ಪಿ.ಎಸ್.ಐ ಶಶಿಧರ.ವೈ, ಹಾಗೂ ಪೇದೆಗಳಾದ ರೋಷನ್ ಜಮೀರ್, ಗಂಗಾಧರ, ಮಹೇಶ ಬಣಕಾರ್ ಹಾಗೂ ಗಾದಿಲಿಂಗಪ್ಪ, ಪ್ರಭಾಕರ, ರಾಮಕೃಷ್ಣ, ಅಮರೇಶ ಭಾಗವಹಿಸಿದ್ದರು.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ.ಶೋಭಾರಾಣಿ ವಿ.ಜೆ, ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.