ಬಳ್ಳಾರಿ,ನ.26
ಬಳ್ಳಾರಿ ಜಿಲ್ಲೆಯು ಕೇವಲ ಗಣಿನಾಡು ಅಲ್ಲ, ಬದಲಾಗಿ ಅನೇಕ ಕಲಾವಿದರನ್ನೊಳಗೊಂಡ ಜಿಲ್ಲೆಯಾಗಿದ್ದು, ಕಲಾವಿದರು ಕಲೆಯನ್ನು ಪೋಷಿಸುತ್ತಾ ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದು ಡಾ.ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಅವರು ಕರೆ ನೀಡಿದರು.
ಬುಧವಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮ0ದಿರದಲ್ಲಿ ಆಯೋಜಿಸಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ ಕಲಾವಿದರಾದ ಬೆಳಗಲ್ ವೀರಣ್ಣ, ಜೋಳದರಾಶಿ ದೊಡ್ಡನಗೌಡ, ಮನ್ಸೂರ್ ಸುಭದ್ರಮ್ಮ, ಬಳ್ಳಾರಿ ರಾಘವ ಸೇರಿದಂತೆ ಇನ್ನೂ ಅನೇಕ ಕಲಾವಿದರು ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಎಲ್ಲಾ ಪ್ರತಿಭೆಗಳು ತಮ್ಮ ಕಲೆಯನ್ನು ಪ್ರದರ್ಶಿಸಲು ಈ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ. ರಾಜ್ಯ ಸರ್ಕಾರದಿಂದ ಕಲೆಯನ್ನು ಪ್ರೋತ್ಸಾಹಿಸಲು ಹಲವು ಯೋಜನೆಗಳಿದ್ದು, ಅದರ ಸದುಪಯೋಗ ಪಡೆದುಕೊಳ್ಳಿ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮಹಾಪೌರರಾದ ಪಿ.ಗಾದೆಪ್ಪ ಅವರು ಮಾತನಾಡಿ, ಮಕ್ಕಳ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮ ಜಿಲ್ಲೆಯಲ್ಲಿ ಆಯೋಜಿಸಿರುವುದು ಸಂತೋಷ ತಂದಿದ್ದು, ಪೋಷಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಅವರು ಮಾತನಾಡಿ, ಮಾನವನ ಜೀವನದಲ್ಲಿ ಅವನಲ್ಲಿರುವ ಕಲೆಯನ್ನು ಹೊರಹಾಕಲು ಕಲೆ, ಸಾಹಿತ್ಯ, ಸಂಗೀತ ಇನ್ನಿತರೆ ಚಟುವಟಿಕೆಗಳು ಮುಖ್ಯವಾಗುತ್ತವೆ. ಬಳ್ಳಾರಿ ಜಿಲ್ಲೆಯು ಅನೇಕ ಕಲಾವಿದರನ್ನು ಹೊಂದಿದೆ. ಕಲಾವಿದರ ಜೀವನದಲ್ಲಿ ಕಲೆ ಪ್ರದರ್ಶನವೇ ಅವರಿಗೆ ಸಂತೃಪ್ತಿ ನೀಡುತ್ತದೆ. ಕಲಾವಿದರಿಗೆ ಕಲೆಯನ್ನು ಪ್ರದರ್ಶಿಸಲು ನೀಡುವ ಹಣಕ್ಕಿಂತ ಅವರ ಕಲೆ ಪ್ರದರ್ಶಿಸಲು ಒಂದು ವೇದಿಕೆ ನೀಡುವುದು ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಪೀಠಿಕೆಯ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.
*ವಿವಿಧ ಸ್ಪರ್ಧೆಗಳು:*
ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮoದಿರದಲ್ಲಿ ಶಾಸ್ತಿಯ ನೃತ್ಯ, ಸುಗಮ ಸಂಗೀತ, ಜಾನಪದ ಗೀತೆಗಳು. ನಗರದ ಸಾಂಸ್ಕೃತಿಕ ಸಮುಚ್ಛಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರ್ ಬಯಲು ರಂಗಮoದಿರದಲ್ಲಿ ಚಿತ್ರಕಲಾ ಸ್ಪರ್ಧೆ (ಸ್ವಕಲ್ಪಿತ), ನಗರದ ಸಾಂಸ್ಕೃತಿಕ ಸಮುಚ್ಛಯದ ಹೊಂಗಿರಣ ಸಭಾಂಗಣದಲ್ಲಿ ಹಿಂದೂಸ್ಥಾನಿ/ಕರ್ನಾಟಕ ಶಾಸ್ತಿಯ ವಾದ್ಯ, ಹಿಂದೂಸ್ಥಾನಿ/ಕರ್ನಾಟಕ ಶಾಸ್ತಿಯ ಸಂಗೀತ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಸ್ಪರ್ಧೆಯಲ್ಲಿ ಸುಮಾರು 60ಕ್ಕಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ ತಮ್ಮ ಕಲಾ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ವೀಣಾ ಕುಮಾರಿ, ಹಿರಿಯ ನೃತ್ಯ ಕಲಾವಿದರಾದ ವನಮಾಲಾ ಕುಲಕರ್ಣಿ, ಜಿಲಾನಿ ಭಾಷಾ, ಚಿತ್ರದುರ್ಗ ಜಿಲ್ಲೆಯ ಹಿರಿಯ ಕಲಾವಿದ ತಿಪ್ಪೇಸ್ವಾಮಿ, ಹಿರಿಯ ಜಾನಪದ ಗಾಯಕ ಯಲ್ಲನಗೌಡ ಶಂಕರಬoಡೆ, ಹಿರಿಯ ಪೀಟಿಲು ವಾದಕರಾದ ಶಕುಂತಲಮ್ಮ, ಹಿರಿಯ ಚಿತ್ರ ಕಲಾವಿದ ಜಾಧವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಚೋರನೂರು ಕೋಟ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ತೀರ್ಪುಗಾರರು, ಇಲಾಖೆಯ ಸಿಬ್ಬಂದಿಗಳು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

