ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಬಲಕುಂದೆ ಗ್ರಾಮದಲ್ಲಿ 11ನೇ ಶತಮಾನದ ಅಪರೂಪದ ಸೂರ್ಯ ಹಾಗೂ ಬ್ರಹ್ಮ ವಿಗ್ರಹಗಳು ಪತ್ತೆಯಾಗಿವೆ. ‘ವಿಜಯನಗರ ಹೆರಿಟೇಜ್ ಎಕ್ಸ್ಪ್ಲೋರೇಷನ್ ಗ್ರೂಪ್’ ಈ ಮಹತ್ವದ ಪ್ರಾಚೀನ ಶಿಲ್ಪಗಳನ್ನು ಗುರುತಿಸಿದೆ. ಇವು ಕುರುಗೋಡು ಸಿಂದರ ಆಳ್ವಿಕೆಯ ಕಾಲಕ್ಕೆ ಸೇರಿದ್ದು ಎನ್ನಲಾಗಿದೆ. ಇಂತಹ ಐತಿಹಾಸಿಕ ಕಲಾಕೃತಿಗಳನ್ನು ಸಂರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಲು ತಜ್ಞರು ಆಗ್ರಹಿಸಿದ್ದಾರೆ.
ಬಳ್ಳಾರಿ, ನವೆಂಬರ್ 26 ರಂದು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬಲಕುಂದೆ ಗ್ರಾಮದ ಬಳಿ ‘ವಿಜಯನಗರ ಹೆರಿಟೇಜ್ ಎಕ್ಸ್ಪ್ಲೋರೇಷನ್ ಗ್ರೂಪ್’ನ ಸಂಶೋಧನಾ ತಂಡವು ಸೂರ್ಯ (ಸೂರ್ಯ ದೇವರು) ನ ಅಸಾಧಾರಣ ಕಪ್ಪು ಶಿಲೆಯ ಶಿಲ್ಪ ಮತ್ತು ಬ್ರಹ್ಮನ ಅಪರೂಪದ ವಿಗ್ರಹವನ್ನು ಪತ್ತೆಮಾಡಿದೆ. ಗ್ರಾಮಕ್ಕೆ ಹೋಗುವ ರಸ್ತೆಯ ಬಳಿ ಇರುವ ಮೌನೇಶ್ ಎಂಬವವರಿಗೆ ಸೇರಿದ ಹೊಲದ ಅಂಚಿನಲ್ಲಿ ಈ ವಿಗ್ರಹಗಳು ಪತ್ತೆಯಾಗಿವೆ. ಸೂಕ್ಷ್ಮವಾದ ಕಪ್ಪು ಕಲ್ಲಿನಿಂದ ಕೆತ್ತಿದ ಈ ಶಿಲ್ಪಗಳನ್ನು ಸ್ಥಳೀಯ ನಿವಾಸಿಗಳಾದ ಬಲಕುಂದೆ ಗ್ರಾಮದ ಹನುಮಂತಪ್ಪ, ಜಡೇಶ್ ಮತ್ತು ಕುಬೇರಪ್ಪ ಅವರ ನೆರವಿನಿಂದಾಗಿ ಗುರುತಿಸಲಾಗಿದೆ. ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಜಯನಗರ ಪರಿಶೋಧನಾ ಗುಂಪಿನ ಅಧ್ಯಕ್ಷ ಟಿಎಚ್ಎಂ ಬಸವರಾಜ್ ಮತ್ತು ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಗೋವಿಂದ ನೇತೃತ್ವದದ ತಂಡವು ಈ ವಿಗ್ರಹಗಳ ಪತ್ತೆಮಾಡಿದೆ.
ಪೂರ್ವಕ್ಕೆ ಮುಖ ಮಾಡಿರುವ ರೀತಿಯಲ್ಲಿರುವ ಸೂರ್ಯ ವಿಗ್ರಹವು 51 ಸೆಂ.ಮೀ ಅಗಲ ಮತ್ತು 83 ಸೆಂ.ಮೀ ಎತ್ತರವಿದೆ. ಇದರ ಪಾದಗಳು 13 ಸೆಂ.ಮೀ ಅಳತೆಯನ್ನು ಹೊಂದಿವೆ. ಎರಡೂ ಕೈಗಳಲ್ಲಿ ಕಮಲದ ಹೂವುಗಳನ್ನು ಹಿಡಿದಿರುವ ರೀತಿಯಲ್ಲಿ ಈ ವಿಗ್ರಹ ಇದೆ. ತಲೆಯ ಹಿಂದೆ ವೃತ್ತಾಕಾರದ ಪ್ರಭಾವಲಯವನ್ನು ಕೆತ್ತಲಾಗಿದೆ ಎಂದು ಸಂಶೋಧನಾ ತಂಡದ ಸದಸ್ಯರಲ್ಲಿ ಒಬ್ಬರಾದ ಗೋವಿಂದ್ ತಿಳಿಸಿದ್ದಾರೆ.
ಸೂಮರು ಹನ್ನೊಂದು ಹನ್ನೆರಡರ ಶತಮಾನದ ವಿಗ್ರಹ
ಶಿಲ್ಪಕಲೆಯ ಶೈಲಿಯ ಆಧಾರದಲ್ಲಿ, ಈ ವಿಗ್ರಹವು ಸೂಮಾರು ೧೧ ಮತ್ತು ೧೨ ನೇ ಶತಮಾನಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜು ಮಾಡಲಾಗಿದೆ. ಕುರುಗೋಡು ಸಿಂದರ ಆಡಳಿತದ ಅಡಿಯಲ್ಲಿ ಬಲಕುಂದೆ ರಾಜಧಾನಿಯಾಗಿ ಸೇವೆ ಸಲ್ಲಿಸಿದ್ದ ಅವಧಿ ಇದು ಎನ್ನಲಾಗಿದೆ. ಬಲಕುಂದೆ ಅಪಾರ ಐತಿಹಾಸಿಕ ಮತ್ತು ಪೌರಾಣಿಕ ಮಹತ್ವವನ್ನು ಹೊಂದಿದೆ. ಗ್ರಾಮ ದೇವತೆ ಬನ್ನಿ ಮಹಾಂಕಾಳಿ ದೇವಾಲಯದ ಮುಂದೆ ಇರುವ ಕಪ್ಪು ಕಲ್ಲಿನ ಬ್ರಹ್ಮ ವಿಗ್ರಹವು ಅಗಲವಾದ ಎದೆ ಮತ್ತು ಎತ್ತಿದ ಕೈಗಳನ್ನು ಹೊಂದಿರುವ ಪ್ರಭಾವಶಾಲಿ ಶಿಲ್ಪವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇಂದು ಹಳ್ಳಿಗಳಲ್ಲಿ ಬ್ರಹ್ಮ ಪೂಜೆ ವಿರಳವಾಗಿ ನಡೆಯುತ್ತಿದ್ದರೂ ಆಗಾಗ್ಗೆ ಕಪ್ಪು ಕಲ್ಲುಗಳನ್ನು ದೇವತೆಯ ಪ್ರತಿನಿಧಿಗಳಾಗಿ ಗುರುತಿಸಲಾಗುತ್ತದೆ. ಬಲಕುಂದೆ ಯಲ್ಲಿರುವ ವಿಗ್ರಹವು ಒಂದು ಅದ್ಭುತವಾದ ಕೆತ್ತನೆ. ಗ್ರಮಸ್ಥರು ಇದನ್ನು ‘ಮೂರು ಮುಖದ ಅಮ್ಮ’ ಎಂದು ಕರೆಯುತ್ತಾರೆ. ಜತೆಗೆ ಹಗರಿ ನದಿಯ ದಡದಲ್ಲಿ ವಿರೂಪಗೊಂಡ ದೇವತೆಯ ಶಿಲ್ಪ, ನಾಗಾ ಕಲ್ಲು ಮತ್ತು ನಂದಿ ವಿಗ್ರಹದ ಅವಶೇಷಗಳ ಇರುವುದನ್ನೂ ಸಂಶೋಧಕರ ತಂಡ ಪತ್ತೆ ಮಾಡಿದೆ.
‘ವಿಶ್ವ ಪಾರಂಪರಿಕ ತಾಣಗಳ ಸಪ್ತಾಹ’ದ ಪ್ರಯುಕ್ತ ಸಂಶೋಧನೆ
‘ವಿಶ್ವ ಪಾರಂಪರಿಕ ತಾಣಗಳ ಸಪ್ತಾಹ’ ಆಚರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಈ ಅಪರೂಪದ ಮತ್ತು ನಿರ್ಲಕ್ಷಿತ ಪರಂಪರೆಯ ಕಲಾಕೃತಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಡಾ. ಗೋವಿಂದ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ರಾಷ್ಟ್ರಕೂಟರ ಕಾಲದ ಶಾಸನಗಳು ಈ ಹಿಂದೆ ಈ ಪ್ರದೇಶದಲ್ಲಿ ಕಂಡುಬಂದಿದ್ದವು ಮತ್ತು ಬಳ್ಳಾರಿ ಜಿಲ್ಲೆಯ ಶಾಸನ ಸಂಗ್ರಹದಲ್ಲಿ ಅವುಗಳನ್ನು ದಾಖಲಿಸಲಾಗಿದೆ ಎಂದು ವಿಜಯನಗರ ಪರಿಶೋಧನಾ ಗುಂಪಿನ ಮುಖ್ಯಸ್ಥ ತಿಪ್ಪೇಸ್ವಾಮಿ ತಿಳಿಸಿದ್ದಾರೆ.
ಪತ್ತೆಯಾಗಿರುವ ಸೂರ್ಯ ವಿಗ್ರಹದ ಕಾಲುಗಳು ಮುರಿದಿರುವ ಸ್ಥಿತಿಯಲ್ಲಿದೆ. ಐತಿಹಾಸಿಕವಾಗಿ ಮಹತ್ವದ ಇಂತಹ ಕಲಾಕೃತಿಗಳನ್ನು ಸಂರಕ್ಷಿಸಲು ಜಿಲ್ಲಾಡಳಿತ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ತಜ್ಞರು ಒತ್ತಾಯಿಸಿರುವುದಾಗಿಯೂ ವರದಿ ಉಲ್ಲೇಖಿಸಿದೆ.

